1st PUC Kannada Holige Yantrada Ammi

1st PUC Kannada Question and Answer – Holige Yantrada Ammi

Looking for 1st PUC Kannada textbook answers? You can download Chapter 13: Holige Yantrada Ammi Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 1st PUC Kannada Textbook Answers—Reflections Chapter 13

Holige Yantrada Ammi Questions and Answers, Notes, and Summary

1ST PUC Kannada Chapter 13

ಹೊಲಿಗೆ ಯಂತ್ರದ ಅಮ್ಮಿ

Holige Yantrada Ammi

Scroll Down to Download Holige Yantrada Ammi PDF
I. ಒಂದು ವಾಕ್ಯದಲ್ಲಿ ಉತ್ತರಿಸಿ.

Question 1.
ಅಮ್ಮಿ ಏನನ್ನು ಪಾಲು ಮಾಡಿದಂತೆ ಬಟ್ಟೆ ಕತ್ತರಿಸುತ್ತಾಳೆ?
Answer:
ಅಮ್ಮಿ ರೊಟ್ಟಿ ಪಾಲು ಮಾಡಿದಂತೆ ಬಟ್ಟೆ ಕತ್ತರಿಸುತ್ತಾಳೆ.

Question 2.
ಚಕ್ರ ತಿರುಗಿಸಿದಂತೆ ಉರುಳುವುದು ಯಾವುದು?
Answer:
 ಚಕ್ರ ತಿರುಗಿಸಿದಂತೆ ಇತಿಹಾಸ ಉರುಳುವುದು.

Question 3.
ಅಮ್ಮಿ ಯಾವಾಗಲೂ ಏನನ್ನು ಧರಿಸುವಳು?
Answer:
ಅಮ್ಮಿ ಯಾವಾಗಲೂ ಹಾಲು ಬಿಳಿಸೀರೆ ಧರಿಸುವಳು.

Question 4.
ಅಮ್ಮಿ ಯಾವುದನ್ನು ಕಡಿದು ಹಾಕಲೆಂದು ಕತ್ತರಿ ಹಿಡಿದಿದ್ದಾಳೆ?
Answer:
ಅಮ್ಮಿ ಲೋಕವಿಕಾರವನ್ನು ಕಡಿದು ಹಾಕಲೆಂದು ಕತ್ತರಿ ಹಿಡಿದಿದ್ದಾಳೆ.

Question 5.
ಅಮ್ಮಿ ಜಗತ್ತಿಗೆ ಎಂತಹ ಬಟ್ಟೆಯನ್ನು ತೊಡಿಸುವಳು?
Answer:
ಅಮ್ಮಿ ಜಗತ್ತಿಗೆ ಬಣ್ಣಬಣ್ಣದ ಬಟ್ಟೆಯನ್ನು ತೊಡಿಸುವಳು.

Question 6.
ಮಗುವಿನಂತೆ ಯಾರನ್ನು ಸಾಕಿದಳು?
Answer:
ಮಗುವಿನಂತೆ ತನ್ನ ಗಂಡನನ್ನು ಸಾಕಿದಳು.

Question 7.
ಹೊಲಿಗೆ ಯಂತ್ರದ ಜೊತೆಗೆ ಅಮ್ಮಿ ಕಳೆದ ಕಾಲವೆಷ್ಟು?
Answer:
ಹೊಲಿಗೆ ಯಂತ್ರದ ಜೊತೆಗೆ ಅಮ್ಮಿ ಕಾಲು ಶತಮಾನ ಕಳೆದಳು.

II. ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿ. 

Question 1.
ಕತ್ತರಿ ಮತ್ತು ಸೂಜಿಗಳ ಕೆಲಸ ಯಾವುದು?
Answer:
ಕತ್ತರಿ ಲೋಕದ ವಿಕಾರಗಳನ್ನು ಕತ್ತರಿಸುವ ಕೆಲಸವನ್ನು, ಸೂಜಿಯು ಚಿಂದಿ ಮನಸ್ಸುಗಳನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದೆ.

Question 2.
ಅಮ್ಮಿಯನ್ನು ಸೃಷ್ಟಿಕರ್ತೆಯೆಂದು ಏಕೆ ಕರೆಯಲಾಗಿದೆ?
Answer:
ಸಂತೆಯಿಂದ ಕೊಂಡ ನಿರಾಕಾರವಾದ ಬಟ್ಟೆಗೆ ಅಮ್ಮಿ ಹೊಲಿಗೆ ಹಾಕಿ ನಮೂನೆ ನಮೂನೆಯ ಪಾತ್ರ ಕೊಡುವ ಕಾರಣದಿಂದ ಆಕೆಯನ್ನು ಸೃಷ್ಟಿಕರ್ತೆ ಎಂದು ಕರೆಯಲಾಗಿದೆ.

Question 3.
ಅಮ್ಮಿಯ ಬದುಕಿನಲ್ಲಿ ನಿರ್ಜಿವ ಬಟ್ಟೆಗೆ ಪ್ರವೇಶ ಹೇಗಾಯಿತು?
Answer:
ಅಮ್ಮಿಯ ಕಣ್ಣು, ಮೂಗು, ಹಣೆ, ರೋಮಗಳಿಂದ ಇಳಿಯುವ ಉಪ್ಪು ನೀರಿನಿಂದಲೇ ನಿಗೂಢವಾದ ಬದುಕಿನೊಳಗೆ ನಿರ್ಜಿವ ಬಟ್ಟೆಗೆ ಪ್ರವೇಶವಾಗುತ್ತದೆ.

Question 4.
ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿರುವುವು ಯಾವುವು?
Answer:
ಹರಿದ ಚಂದ್ರ, ತೂತುಬಿದ್ದ ನಕ್ಷತ್ರ. ಯಾರದೋ ಚಾಟಿ ಏಟಿಗೆ ಗಿರನೆ ತಿರುಗುವ ಗ್ರಹಗಳ ನಡುವೆ ಉಲ್ಕೆಗಳು, ಧೂಮಕೇತುಗಳು, ದಿಕ್ಕು ದೆಸೆಯಲ್ಲಿದೆ ಅಲೆಮಾರಿಯಂತೆ ಅಲೆಯುತ್ತಿರುವುವು.

Question 5.
ಹಾಸಿಗೆಯನ್ನು ಹೊಲಿದುಕೊಡುವಂತೆ ಆಮ್ಮಿಯನ್ನು ಕೇಳಲು ಕಾರಣವೆನು?
Answer:
ಹಾಸಿಗೆಯನ್ನು ಹೊಲಿದು ಕೊಡುವಂತೆ ಕವಿ ಅಮ್ಮಿಯನ್ನು ಕೇಳುತ್ತಿದ್ದಾರೆ ಏಕೆಂದರೆ ನಿದ್ದೆ ಬಾರದೆ ಒದ್ದಾಡುತ್ತಿರುವ ಉಲ್ಕೆಗಳು, ಧೂಮಕೇತುಗಳಂತ ಅಲೆಮಾರಿಗೆ ನೆಲೆ ದೊರಕಿಸಬೇಕಿದೆ.

Question 6.
ಆಮ್ಮಿಯ ಪಾಲಿಗೆ ನಮಾಜ್ ಮತ್ತು ಈದ್ ಎಂದರೆ ಯಾವುದು?
Answer:
ಅಮ್ಮಿಯ ಪಾಲಿಗೆ ನಮಾಜ್ ಎಂದರೆ ಜುಮ್ಮಾ ಮತ್ತು ಈದ್ ಎಂದರೆ ದೂದ್ ಖುರ್ಮಾ.

III. ಸಂದರ್ಭ ಸೂಚಿಸಿ ವಿವರಿಸಿ.

Question 1.
ನಿರಾಕಾರಮಾನಕ್ಕೆ ಹೊಲಿಗೆ ಹಾಕಿ ರೂಪು ನೀಡುತ್ತಾಳೆ.

Answer:
ಆಯ್ಕೆ : ಈ ವಾಕ್ಯವನ್ನು ಕವಿ ‘ಆರೀಫ್ ರಾಜಾ’ರವರು ಬರೆದ ‘ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಬಟ್ಟೆ ಹೊಲಿಯುವ ಅಮ್ಮಿಯ ಕೆಲಸದ ಚತುರತೆಯನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಅಮ್ಮಿ ಸಂತೆಯಲ್ಲಿ ಆಕಾರ ರಹಿತವಾದ ಬಟ್ಟೆಯನ್ನು ಕೊಂಡು ತಂದು, ಅವುಗಳಿಗೆ ಸೂಕ್ತವಾದ ಆಕಾರವನ್ನು ನೀಡಿ ಸೂಜಿಯಿಂದ ಹೊಲಿಯುತ್ತಾಳೆ. ಆಕೆ ಸ್ತ್ರೀಯಾಗಿದ್ದು ನಿರಾಕಾರಕ್ಕೆ ಆಕಾರ ಕೊಡುವ ವೃತ್ತಿ ನೈಪುಣ್ಯತೆ ಮೆಚ್ಚುವಂತದ್ದು. ಆಕೆಯ ಈ ಗುಣವನ್ನೇ ಗಮನಿಸಿ ಕವಿ ಸೃಷ್ಟಿಕರ್ತೆ ಎಂದು ಕರೆಯುತ್ತಾ ಅವಳ ಸ್ವಾವಲಂಬನೆಯ ಬದುಕಿನ ಪರಿಯನ್ನು ಮೆಚ್ಚುತ್ತಾರೆ.

Question 2.
ಚಿಂದಿ ಮನಸುಗಳನ್ನು ಜೋಡಿಸಲು ಸೂಜಿ ಇದೆ.

Answer:
ಆಯ್ಕೆ: ಈ ವಾಕ್ಯವನ್ನು ಕವಿ ‘ಆರೀಘರಾಜಾ’ರವರು ಬರೆದ ‘ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ಅಮ್ಮಿಯು ಬಳಸುವ ಸೂಜಿಯು ನಿರ್ವಹಿಸುವ ಕೆಲಸದ ಕುರಿತು ವಿವರಿಸುವ ಸಂದರ್ಭಇದಾಗಿದೆ.
ಸ್ವಾರಸ್ಯ: ಅಮ್ಮಿಯು ಕತ್ತರಿಸಿದ ಬಟ್ಟೆಯನ್ನು ಹೊಲಿದು ಒಂದು ಮಾಡಲು ಸೂಜಿಯನ್ನು ಬಳಸುತ್ತಾಳೆ. ಇಲ್ಲಿ ಸೂಜಿಯು ಸಹಜವಾಗಿ ಜೋಡಿಸುವ ಪ್ರಕ್ರಿಯೆಯಲ್ಲಿ ಬೇಕಾಗುತ್ತದೆ. ಆದರೆ ಇಲ್ಲಿ ಆಕೆ ಉಪಯೋಗಿಸುವ ಸೂಜಿಯು ಒಂದು ಸಾಧಾರಣ ವಸ್ತುವಾಗಿರದೆ ಅದು ಚಿಂದಿ ಮನಸ್ಸುಗಳನ್ನು ಜೋಡಿಸಿ ಲೋಕದ ಮಾನ ಕಾಪಾಡುತ್ತದೆ.ಆಕೆಯ ಬದುಕಿನಲ್ಲಿ ಪ್ರವೇಶಿಸಿದ ಸೂಜಿಯೂ ಕೂಡ ಚುಚ್ಚುವ ಗುಣವನ್ನು ಮರೆತು ಒಂದು ಮಾಡುವ ಕೆಲಸ ಮಾಡುತ್ತಿದೆ. ಇದು ಅಮ್ಮಿಯ ವಿಶೇಷತೆ ಎಂಬುದು ಕವಿಯ ಅಭಿಪ್ರಾಯವಾಗಿದೆ.

Question 3.
ಅಮ್ಮಿ ಯಾವಾಗಲೂ ಧರಿಸುವುದು ಹಾಲು ಬಿಳಿ ಸೀರೆ.

Answer:
ಆಯ್ಕೆ: ಈ ವಾಕ್ಯವನ್ನು ಕವಿ ‘ಆರೀಫ್ ರಾಜಾ’ರವರು ಬರೆದ’ ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಅಮ್ಮಿಯ ಸರಳ ಬದುಕಿನ ಚಿತ್ರಣ ಇಲ್ಲಿದೆ.
ಸ್ವಾರಸ್ಯ: ಅಮ್ಮಿಯ ಬದುಕು ವಿಶಿಷ್ಟವಾದುದು. ಏಕೆಂದರೆ ಈಕೆ ದಿನಂಪ್ರತಿ ಕಾಯಕದಲ್ಲಿ ನಿರತಳಾಗಿರುತ್ತಾಳೆ. ತನ್ನ ಕೆಲಸವನ್ನು ನಿರ್ವಹಿಸುತ್ತಾ ಬೇರೆಯವರಿಗೆ ಬಣ್ಣ ಬಣ್ಣದ ಬಟ್ಟೆ ಹೊಲಿದುಕೊಡುವ ಅಮ್ಮಿ ಧರಿಸುವುದು ಮಾತ್ರ ಹಾಲು ಬಣ್ಣದ ಬಿಳಿ ಸೀರೆ. ಇದು ಆಕೆಯ ಸರಳ ಬದುಕಿನ ಪ್ರತೀಕವಾಗಿದೆ. ಅಷ್ಟೇ ಅಲ್ಲದೇ ಅವಳ ಬದುಕಿನ ಬಡತನದ ಸೂಕ್ಷ್ಮತೆಯನ್ನು ಸೂಚಿಸುತ್ತದೆ. ಇದನ್ನೇ ಕವಿ ವಿವರಿಸುತ್ತಾ ಮೇಲಿನಂತೆ ಹೇಳುತ್ತಾರೆ.

Question 4.
ನಮಾಜ್ ಎಂದರೆ ಜುಮ್ಮಾ ಈದ್ ಎಂದರೆ ದೂದ್ ಖುರ್ಮಾ.

Answer:
ಆಯ್ಕೆ : ಈ ವಾಕ್ಯವನ್ನು ಕವಿ ‘ಆರೀಫ್ ರಾಜಾ’ರವರು ಬರೆದ ‘ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ಅಮ್ಮಿಯ ಬಡತನ ಮತ್ತು ಶ್ರಮದ ಬದುಕಿನಲ್ಲಿ ಆಕೆಯ ಜೀವನದಲ್ಲಿ ಬರುವ ಹಬ್ಬಗಳಿಗೂ ಪ್ರಾಮುಖ್ಯತೆ ಇಲ್ಲ ಎಂಬುದನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಮುಸ್ಲಿಂ ಬಾಂಧವರಿಗೆ ಶುಕ್ರವಾರ ಎನ್ನುವುದು ಪವಿತ್ರವಾದ ವಾರ. ಈದ್ ಮಿಲಾದ್ ಎಂದರೆ ಪವಿತ್ರವಾದ ಹಬ್ಬ.ಆದರೆ ಅಮ್ಮಿಯ ಪಾಲಿಗೆ ಇವೆರಡೂ ಕೂಡ ಸಾಧಾರಣ ಎಂಬಂತಿದೆ. ಏಕೆಂದರೆ ಆಕೆಯ ಶ್ರಮದ ಬದುಕಿನಲ್ಲಿ ಇವುಗಳ ಕಡೆ ಗಮನ ಹರಿಸಲಿಕ್ಕೆ ಆಕೆಗೆ ಸಮಯವಿಲ್ಲ. ಅಲ್ಲದೆ ಹಬ್ಬಗಳನ್ನು ಸಂಭ್ರಮಿಸಲು ಆಕೆಯ ಬಳಿ ಸಾಕಷ್ಟು ಹಣವೂ ಇಲ್ಲ. ಹಾಗಾಗಿ ಆಕೆಗೆ ಹಬ್ಬವು ದೂದ್ ಖುರ್ಮಾದಲ್ಲಿಯೇ ಮುಗಿಯುತ್ತದೆ ಎನ್ನುವುದನ್ನು ಕವಿ ಈ ಮೇಲಿನಂತೆ ಹೇಳುತ್ತಾರೆ.

Question 5.
ಕರುಳ ಕುಡಿಗಳೆಂದರೆ ಕನಸುಗಣ್ಣು.

Answer:
ಆಯ್ಕೆ: ಈ ವಾಕ್ಯವನ್ನು ಕವಿ ‘ಆರೀಫ್ ರಾಜಾ’ರವರು ಬರೆದ’ ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ತನ್ನ ಮಕ್ಕಳ ಬಗ್ಗೆ ಅಮ್ಮಿಯು ಹೊಂದಿದ್ದ ಭಾವನೆಯನ್ನು ಕವಿ ವಿವರಿಸುವ ಸಂದರ್ಭಇದಾಗಿದೆ.
ಸ್ವಾರಸ್ಯ: ಅಮ್ಮಿಯದ್ದು ಕಷ್ಟದ ಜೀವನ. ರಟ್ಟಿ ಬೀಳುವ ತನಕ ಹೊಲಿಗೆ ಯಂತ್ರದ ರಾಟೆ ತಿರುಗಿಸಿ ಕೆಲಸ ಮಾಡಿ ತನ್ನ ಆರು ಮಕ್ಕಳನ್ನು, ಜೊತೆಗೆ ತನ್ನ ಗಂಡನನ್ನು ನೋಡಿಕೊಳ್ಳುವ ಜವಾಬ್ದಾರಿ ಈಕೆಯದ್ದು, ಆದರೂ ಬದುಕಿನ ಬಗ್ಗೆ ತಾತ್ಸರ್ಯ ಇಲ್ಲ. ಆಕೆಗೆ ದುಡಿಮೆಯ ನಡುವೆಯೂ ತನ್ನ ಮಕ್ಕಳೆಂದರೆ ಪ್ರಾಣ. ಆಕೆಯ ಭವಿಷ್ಯದ ಕಣ್ಣುಗಳು. ಇದನ್ನೇ ವಿವರಿಸುವಾಗ ಕವಿ ಈ ಮೇಲಿನಂತೆ ಹೇಳುತ್ತಾರೆ.

IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಆಮ್ಮಿಯ ಹೊಲಿಗೆ ಕೌಶಲ್ಯವು ಕವಿತೆಯಲ್ಲಿ ಹೇಗೆ ಅಭಿವ್ಯಕ್ತಿಗೊಂಡಿದೆ?

Answer:
ಕವಿ ಈ ಕವಿತೆಯಲ್ಲಿ ಹೊಲಿಗೆ ಯಂತ್ರದ ರೂಪಕದೊಂದಿಗೆ ಅಮ್ಮಿಯ ಹೊಲಿಗೆಯ ಕೌಶಲ್ಯವನ್ನು ಅಭಿವ್ಯಕ್ತಿಸಿದ್ದಾರೆ. ಹೊಲಿಗೆ ಯಂತ್ರದ ಮೂಲಕ ಕಾಯಕ ನಿರ್ವಹಿಸುವ ಆಮ್ಮಿಗೆ ಈ ಹೊಲಿಗೆ ಯಂತ್ರ ಕೇವಲ ಒಂದು ಸಾಧಾರಣ ವಸ್ತುವಲ್ಲ, ಅದು ಆಕೆಯ ಬದುಕೂ ಕೂಡ.ಇಲ್ಲಿ ಬರುವ ಅಮ್ಮಿ ಶ್ರಮದ ಪ್ರತೀಕವಾಗಿದ್ದಾಳೆ. ಹೊಲಿಗೆ ಯಂತ್ರ, ಕತ್ತರಿ, ಸೂಜಿಯ ಮೂಲಕ ಕೆಲಸ ನಿರ್ವಹಿಸುವ ಅಮ್ಮಿ ಲೋಕಕ್ಕೆ ಮಾದರಿಯಾಗಿದ್ದಾಳೆ.

ರೊಟ್ಟಿ ಪಾಲು ಮಾಡಿದಂತೆ ಬಟ್ಟೆಯಂಗಡಿ ಕೊರೆದು ಕತ್ತರಿಸುವ ಅಮ್ಮಿ ತುಂಡು ತುಂಡು ಸೇರಿಸಿ ಒಂದು ಮಾಡುತ್ತಾಳೆ. ಇಲ್ಲಿ ಆಕೆ ತುಂಡು ತುಂಡು ಮಾಡಿ ಕತ್ತರಿಸುವ ಬಟ್ಟೆ ಕೇವಲ ಬಟ್ಟೆಯಾಗಿರದೆ ಚಿಂದಿ ಚಿಂದಿ ಮನಸ್ಸುಗಳನ್ನು ಒಂದು ಮಾಡುವುದಾಗಿದೆ. ಆಮ್ಮಿ ಒಂದು ಕೈಯಲ್ಲಿ ಕತ್ತರಿ ಹಿಡಿದು. ಇನ್ನೊಂದು ಕೈಯಲ್ಲಿ ಸೂಜಿ ಹಿಡಿದಿದ್ದಾಳೆ. ಕತ್ತರಿಯು ಕೆಟ್ಟ ಮುಖವಾಡವನ್ನು ಒಡೆದು ಬಯಲು ಮಾಡಿದರೆ, ಸೂಜಿಯು ಲೋಕದ ಮಾನಕಾಪಾಡುತ್ತದೆ.

ಸಂತೆಯಿಂದ ಕೊಂಡು ತಂದ ನಿರಾಕಾರಮಾನ ಬಟ್ಟೆಗೆ ಹೊಲಿಗೆ ಹಾಕಿ ನಮೂನಮೂನೆಯ ರೂಪು ನೀಡುವ ಅಮ್ಮಿಯೇ ಸೃಷ್ಟಿಕರ್ತೆ ಎನ್ನುವ ಕವಿಯ ಮಾತುಗಳು ಅಮ್ಮಿಯ ಹೊಲಿಗೆಯ ಕೌಶಲ್ಯ ವಿವರಿಸುತ್ತದೆ. ಆಮ್ಮಿಯು ಯಂತ್ರದ ಚಕ್ರ ತುಳಿದಂತೆಲ್ಲ ಆಕೆಯ ಬದುಕಿನ ನೆನಪುಗಳ ಇತಿಹಾಸ ಒಂದು ಸುತ್ತು ಸುತ್ತುವ ಪರಿ ಆಕೆಯ ಬದುಕಿನ ನಿರಂತರತೆಯನ್ನು ಸೂಚಿಸುತ್ತದೆ. ಅಲ್ಲದೆ ಆಕೆಯ ಬದುಕು ಸರಳವಾಗಿದ್ದರೂ ಬೇರೆಯವರಿಗೆ ಬಣ್ಣ ಬಣ್ಣದ ಬಟ್ಟೆಯನ್ನು ಹೊಲಿದು ಕೊಡುತ್ತಾಳೆ. ಇದು ಆಕೆಯ ನಿರ್ಮಲ ಮನಸ್ಸು ಮತ್ತು ಕೌಶಲ್ಯತೆಗೆ ಸಾಕ್ಷಿಯಾಗಿದೆ.

Question 2.
ಹೊಲಿಗೆ ಕಾಯಕದ ಮೂಲಕ ಮನೆ ಮತ್ತು ಲೋಕದ ಮಾನವನ್ನು ಅಮ್ಮಿ ಹೇಗೆ ಕಾಪಾಡಿದ್ದಾಳೆ?

Answer:
ಅಮ್ಮಿಯ ಶ್ರಮ ಇಲ್ಲಿ ಕಾವ್ಯವಾಗಿ ರೂಪು ತಳೆದಿದೆ. ಅಮ್ಮಿ ದುಡಿಮೆಯಲ್ಲಿ ದೇವರನ್ನು ಕಾಣುವವಳು. ಕಾಯಕತತ್ವಕ್ಕೆ ಬದ್ಧಳಾದವಳು. ಅಮ್ಮಿಯ ಕಣ್ಣು, ಮೂಗು, ಹಣೆ, ರೋಮಗಳಿಂದ ಇಳಿಯುವ ಉಪ್ಪು ನೀರೇ ಆಕೆಯ ಶ್ರಮದ ಬದುಕಿನ ಸಂಕೇತವಾಗಿದೆ. ಆಕೆ ತನ್ನ ಅವಿರತ ದುಡಿಮೆಯಿಂದಲೇ ತನ್ನ ಗಂಡನನ್ನು ಮತ್ತು ತನ್ನ ಆರು ಮಕ್ಕಳ ಹಸಿವೆಯನ್ನು ನೀಗಿಸುತ್ತಾಳೆ. ತನ್ನ ಶ್ರಮದ ಮೂಲಕ ಬೇರೆಯವರಿಗೆ ಬಣ್ಣ ಬಣ್ಣದ ಬಟ್ಟೆ ಹೊಲಿದುಕೊಡುವ ಅಮ್ಮಿಯದ್ದು ಮಾತ್ರ ಸರಳ ಬದುಕು. ಆಕೆಯ ಇಲ್ಲಿಯ ಶ್ರಮದ ಜೀವನ ಪಿ. ಲಂಕೇಶ್ ಅವರ ‘ಅವ್ವ’ ಕವನದಲ್ಲಿ ಬರುವ ಅವ್ವನ ಶ್ರಮದ ನೆನಪನ್ನು ತರಿಸುತ್ತದೆ.

ಅಮ್ಮಿ ಹೊಲಿದುಕೊಡುವ ಬಟ್ಟೆ ಕೇವಲ ಬಟ್ಟೆಯಲ್ಲ, ಅದರ ಮೂಲಕ ಆಕೆ ಚಿಂದಿ ಚಿಂದಿ ಮನಸ್ಸುಗಳನ್ನು ಒಟ್ಟು ಸೇರಿಸುತ್ತಾಳೆ. ಮಾತ್ರವಲ್ಲ ಸೂಜಿಯಿಂದ ಹೊಲಿದು ಲೋಕದ ಮಾನವನ್ನು ಕಾಪಾಡುತ್ತಾಳೆ. ಇಲ್ಲಿ ಆಕೆಯ ಬದುಕಿನಲ್ಲಿ ಪ್ರವೇಶಿಸಿದ ಸೂಜಿಯೂ ಕೂಡ ಚುಚ್ಚುವ ಗುಣವನ್ನು ಮರೆತು ಒಂದು ಮಾಡುವ ಕೆಲಸ ಮಾಡುತ್ತಿರುವುದು ಆಕೆಯ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಹೀಗೆ ಆಕೆ ಹೊಲಿಗೆ ಕಾಯಕದ ಮೂಲಕ ಮನೆ ಮತ್ತು ಲೋಕದ ಮಾನವನ್ನು ಕಾಪಾಡುತ್ತಾಳೆ.

Question 3.
ಹಾಸಿಗೆಯನ್ನು ಹೊಲಿದು ಕೊಡುವಂತೆ ಅಮ್ಮಿಯನ್ನು ಕೇಳಲು ಕಾರಣಗಳೇನು?

Answer:
ಕವಿಯು ಕವಿತೆಯ ಮೂಲಕ ತಾಯಿಯ ಕೌಶಲ, ಶಕ್ತಿ, ಸಾಮರ್ಥ್ಯ, ವ್ಯಕ್ತಿತ್ವ ಹಾಗೂ ಸೃಷ್ಟಿಗುಣಗಳನ್ನು ಆಮ್ಮಿಯ ಮೂಲಕ ಕಟ್ಟಿಕೊಡುವುದರ ಜೊತೆಗೆ ಧರ್ಮಾಂಧತೆ, ಆಂಧಶ್ರದ್ದೆ ಹಾಗೂ ವೈಷಮ್ಯಗಳಿಂದ ತತ್ತರಿಸುತ್ತಿರುವ ವಾತಾವರಣವನ್ನು ಹೊಲಿಗೆ ಯಂತ್ರದ ಮೂಲಕ ಕಟ್ಟಿಕೊಡುತ್ತಾರೆ. ಇಲ್ಲಿ ಬರುವ ಚಿಂದಿ ಮನಸ್ಸುಗಳು ಜನರು ಹೊಂದಿರುವ ಧರ್ಮಾಂಧತೆ, ಅಂಧಶ್ರದ್ದೆಗಳಿಗೆ ಸಾಕ್ಷಿಯಾಗಿವೆ. ಆಮ್ಮಿಯು ಬೇಡವಾದದ್ದನ್ನು ಕತ್ತರಿಸಿ ಒಳಿತನ್ನು ಉಳಿಸಿ ಸೂಜಿಯ ಮೂಲಕ ಹೊಲಿಯಲು ಮುಂದಾಗುತ್ತಾಳೆ. ಇಂದು ಚಂದ್ರ, ನಕ್ಷತ್ರ, ಗ್ರಹಗಳು ಗಿರನೆ ತಿರುಗುತ್ತಿವೆ.

ಪಾವಿತ್ರತೆಯ ಸಂಕೇತವಾದ ಚಂದ್ರನು ಹರಿದು ಹೋಗಿದ್ದಾನೆ. ನಕ್ಷತ್ರ ತೂತು ಬಿದ್ದು ಮಿನುಗುವಿಕೆಯನ್ನು ಕಳೆದುಕೊಂಡಿದೆ. ಗ್ರಹಗಳು ಯಾರದೋ ದಾಳದ ವಸ್ತುಗಳಾಗಿವೆ. ಜನತೆಯಲ್ಲಿ ‘ನಂಬಿಕೆಗೆ ಬೆಲೆ ಕಡಿಮೆಯಾಗಿ ಭಾವನೆಗಳಿಗೆ ಬೆಲೆ ಜಾಸ್ತಿಯಾಗಿದೆ’. ಈ ಭಾವನೆ ತನ್ನ ಅಂಧ ಮನಸ್ಸಿನ ಮಾತುಗಳನ್ನು ಕೇಳಿ ಘರ್ಷಣೆಗೆ ಅವಕಾಶ ಒದಗಿಸಿದೆ. ಆಕಾಶ ಕಾಯಗಳಾದ ಉಲ್ಕೆಗಳು, ಧೂಮಕೇತುಗಳು ಅಲೆಮಾರಿಯ ಹಾಗೆ ದಿಕ್ಕುದೆಸೆಯಿಲ್ಲದೆ ತಿರುಗಾಡುತ್ತಿವೆ. ಇದನ್ನೆಲ್ಲಾ ನೋಡಿದ ಕವಿಯ ಮನ್ನಸ್ಸು ನಿದ್ದೆ ಬಾರದೆ ಒದ್ದಾಡಿ ನೆಮ್ಮದಿಯನ್ನು ಕಳೆದುಕೊಂಡು ಅಮ್ಮಿಯಲ್ಲಿ ಹಾಸಿಗೆಯನ್ನು ಹೊಲಿದುಕೊಡುವಂತೆ ಕೇಳಿದ್ದಾರೆ.

Question 4.
ಅಮ್ಮಿಯ ವ್ಯಕ್ತಿತ್ವ ಕವಿತೆಯಲ್ಲಿ ಒಡಮೂಡಿದ ಬಗೆಯನ್ನು ವಿವರಿಸಿ.

Answer:
ಆರೀಫ್‌ ರಾಜಾರವರ ಹೊಲಿಗೆ ಯಂತ್ರದ ಅಮ್ಮಿ ಕವಿತೆಯು ತಾಯಿಯೊಬ್ಬಳ ಶ್ರಮದ ಬದುಕಿನ ಅನಾವರಣವನ್ನು ಮಾಡುತ್ತದೆ. ಸಂತೆಯಿಂದ ಕೊಂಡು ತಂದ ಬಟ್ಟೆಗೆ ಆಮ್ಮಿಯು ಹೊಲಿಗೆ ಹಾಕಿ ನಿರಾಕಾರಮಾನಕ್ಕೆ ಆಕಾರಕೊಡುವ ಆಕೆಯ ಕಾಯಕ ಸೃಷ್ಟಿಕರ್ತೆಗೆ ಸಮಾನವಾದುದು. ಅಮ್ಮಿಯ ಕಣ್ಣು, ಮೂಗು, ಹಣೆ, ರೋಮಗಳಿಂದ ಇಳಿಯುವ ಉಪ್ಪು ನೀರೇ ಆಕೆಯ ಶ್ರಮದ ಬದುಕಿನ ಸಂಕೇತವಾಗಿದೆ. ಬಣ್ಣ ಬಣ್ಣದ ಬಟ್ಟೆಯನ್ನು ಹೊಲಿದು ಕೊಡುವ ಅಮ್ಮಿಯು ಉಡುವುದು ಮಾತ್ರ ಹಾಲು ಬಿಳಿಯ ಸೀರೆ. ಇದು ಆಕೆಯ ಸರಳ ಬದುಕಿಗೆ ಸಾಕ್ಷಿಯಾಗಿದೆ. ಚಿಂದಿ ಮನಸ್ಸುಗಳನ್ನು ಜೋಡಿಸಿ ಲೋಕದ ಮಾನ ಕಾಪಾಡುವ ಆಕೆಯ ಬದುಕು ಗಮನಾರ್ಹವಾದುದು.

ರಟ್ಟೆ ಬೀಳುವ ತನಕರಾಟೆ ತಿರುಗಿಸಿ ತನ್ನ ಎಡೆಬಿಡದ ಬದುಕಿನಲ್ಲಿಯೂ, ಅಸಹಾಯಕನಾದ ಗಂಡನನ್ನು, ತನ್ನ ಭವಿಷ್ಯದ ಕನಸುಗಳಾದ ಮಕ್ಕಳನ್ನು ಸಾಕುವ ಅಮ್ಮಿಯು ಪುರುಷನಿಗಿಂತ ತಾನು ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನೂ, ಅಲ್ಲದೆ ‘ಹೆಣ್ಣು ಸಂಸಾರದಕಣ್ಣು’ ಎನ್ನುವುದನ್ನು ತೋರಿಸುತ್ತಾಳೆ. ಹೊಲಿಗೆಯ ಯಂತ್ರದ ಮೂಲಕ ದುಡಿಮೆಯಲ್ಲಿಯೇ ಕಾಲು ಶತಮಾನವನ್ನು ಕಳೆದ ಅಮ್ಮಿಯು ಬದುಕಿನಲ್ಲಿ ಒಮ್ಮೆಯೂ ವಿಚಲಿತಳಾಗಲಿಲ್ಲ. ಈ ಎಲ್ಲಾ ಅಂಶಗಳು ಆಕೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಹೊಲಿಗೆ ಯಂತ್ರದ ಅಮ್ಮಿ: ಸಾರಾಂಶ [Summary]

1st PUC Kannada chapter 13 Holige Yantrada Ammi Question and Answer
1st PUC Kannada chapter 13 Holige Yantrada Ammi Question and Answer

ಅಮ್ಮಿ ಹೊಲಿಗೆ ಕೆಲಸ ಮಾಡುತ್ತಾಳೆ. ಮಕ್ಕಳಿಗೆ ರೊಟ್ಟಿಯನ್ನು ತುಂಡು ತುಂಡು ಮಾಡಿಕೊಡುವಂತೆ ಬಟ್ಟೆಗಳನ್ನು ಅಳತೆಗೆ ತಕ್ಕಂತೆ ಕತ್ತರಿಸಿ. ಮತ್ತೆ ಅವುಗಳನ್ನು ಹೊಲಿದು ಒಂದು ಮಾಡುತ್ತಾಳೆ. ಲೋಕದ ಚಿಂದಿ ಮನಸ್ಸುಗಳನ್ನು ಜೋಡಿಸಲೆಂದು ಸೂಜಿಯನ್ನು, ಲೋಕದ ವಿಕಾರಗಳನ್ನು ಕತ್ತರಿಸಿ ಹಾಕಲೆಂದು ಕತ್ತರಿಯನ್ನು ಕೈಲಿ ಹಿಡಿದಿದ್ದಾಳೆ. ಜಗತ್ತಿನ ದಾರಿ ಸಾಗಲು ಗುಂಡಾದ ಗಾಲಿ ಇದೆ. ಕಾಲಿನಿಂದ ಹೊಲಿಗೆ ಯಂತ್ರದ ಪೆಡಲು ತುಳಿಯುತ್ತಾ ಚಕ್ರವನ್ನು ತಿರುಗಿಸಿದಾಗಲೆಲ್ಲ ಇತಿಹಾಸ ಒಂದೊಂದು ಸುತ್ತು ತಿರುಗುತ್ತದೆ. ಸಂತೆಯಿಂದ ಕೊಂಡು ತಂದ ನಿರಾಕಾರವಾದ ಬಟ್ಟೆಗೆ ಅಮ್ಮಿ ಹೊಸರೂಪ ನೀಡುತ್ತಾಳೆ. ಆಕಾಶದಂತಹ ಕಡಲಿನಂತಹ ಬಟ್ಟೆಗೆ ನಾನಾ ವಿಧವಾದ ಆಕಾರ ಕೊಡುವ ಅಮ್ಮಿ ಸೃಷ್ಟಿಕರ್ತೆ, ಜಗತ್ತಿಗೆ ಬಣ್ಣಬಣ್ಣದ ಉಡುಗೆ ತೊಡಿಸುವ ಇವಳು ತೊಡುವುದು ಹಾಲು ಬಣ್ಣದ ಬಿಳಿಸೀರೆ.

ಅಪೂರ್ಣವಾದ ಜೀವನವನ್ನು ಹರಿದ ಚಂದ್ರನಂತೆ ಎಂದೂ, ಬಾಳಿನಲ್ಲಿ ಬೆಳಕೆಂಬುದಿಲ್ಲ ಎಂಬುದನ್ನು ತೂತುಬಿದ್ದ ನಕ್ಷತ್ರ ಎಂಬ ಮಾತಿನಲ್ಲಿಯೂ, ನೆಲೆಯಿಲ್ಲದ ಬದುಕನ್ನು ದಿಕ್ಕುದೆಸೆಯಿಲ್ಲದೆ ಅಲೆವ ಅಲೆಮಾರಿಗಳು ಎಂಬ ಮಾತಿನಲ್ಲಿ, ಕವಿ ಹೇಳುತ್ತಾ ತನಗೂ ಒಂದು ಹಾಸಿಗೆಯನ್ನು ಹೊಲಿದು ಕೊಡುವಂತೆ ಬೇಡುತ್ತಾರೆ. ಇವಳ ಪಾಲಿಗೆ ನಮಾಜ್ ಎಂದರೆ ಜುಮ್ಮಾ ಶುಕ್ರವಾರ, (ಈದ್) ಹಬ್ಬ (ಎಂದರೆ ಶಾವಿಗೆ ಪಾಯಸ) ದೂದ್‌ ಕುರ್ಮಾ. ಹೀಗೆ ಹೊಲಿಗೆ ಯಂತ್ರದ ಮುಂದೆ 25 ವರ್ಷಗಳ ಕಾಲ ಅಮ್ಮಿ ತನ್ನ ಆರು ಮಕ್ಕಳ ಜೊತೆಗೆ ಗಂಡನನ್ನೂ ಮಗುವಿನಂತೆ ಸಾಕಿದಳು. ಹಗಲು ರಾತ್ರಿರಾಟ ತಿರುಗಿಸಿ ಕಷ್ಟಪಟ್ಟು ದುಡಿದ ಅಮ್ಮಿ ಮರುಭೂಮಿಯಲ್ಲಿ ಸಿಗುವ ಓಯಸಿಸ್‌ನಂತೆ ಮಕ್ಕಳ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾಳೆ.

Click Here to Download Holige Yantrada Ammi PDF Notes
Click Here to Watch Holige Yantrada Ammi Video 

You cannot copy content of this page